doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Friday, June 4, 2010

ಮಲೆನಾಡ ಮಡಿಲಿಂದ...




ಮಳೆಗಾಲಕ್ಕೆ ಮಲೆನಾಡೇ ಸರಿ...
ಮುಂಗಾರು ಕಳೆದ ಬಾರಿ ಭರದಿಂದ ಆಗಮಿಸಿ, ಆಗೊಮ್ಮೆ ಈಗೊಮ್ಮೆ ರೌಧ್ರಾವತಾರ ತಾಳಿ ಬಿರುಸಾಗಿ ಸುರಿದರೂ ನಮ್ಗೆ ಮುಂಗಾರಿನ ಮೇಲಿರುವ ಮಮತೆ, ಒಲುಮೆ, ಅಕ್ಕರೆ ಒಂದಿನಿತೂ ಕಡಿಮೆಯಾಗಲ್ಲ. ನನ್ಗಂತೂ ಮುಂಗಾರು ಆಗಮನದ ಈ ಹೊತ್ತು ಬಾಲ್ಯದಲ್ಲಿ ಗತಿಸಿಹೋದ ಅದೆಷ್ಟೋ ಸಿಹಿ ಕಹಿ ಮಿಶ್ರಿತ ನೆನಪುಗಳು ಸದಾಕಾಲ ಕಾಡ್ತಾನೇ ಇರುತ್ತೆ. ಮುಂಗಾರು ಮಳೆ ಕ್ಷಣಕ್ಕೊಮ್ಮೆ ವೇಗ ಪಡೆಯಬಹುದು ಅಥವಾ ಹನಿಯುತ್ತಿರಬಹುದು. ಆದ್ರೆ ನೆನಪುಗಳ ಧಾರೆ ಬಿಡದೆ ಸುರಿಯುತ್ತಿರುತ್ತದೆ. ಮಳೆ ಕೆಲವರಿಗೆ ವಿಪರೀತ ಸಂಕಟ ತರಬಹುದು. ಮಳೆ ಬಂತು ಅಂದ್ರೆ ಸಾಕು, ಮನೆಯ ಬಾಗಿಲು ಮುಚ್ಚಿ ಮನೆಯೊಳಗೆ ಸೇರ್ಕೊಳ್ಳೋರು ಬಹಳ ಜನ. ಇವರಿಗೆ ಈ ಮಳೆಯಲ್ಲಿ ನೆನೆಯೋ ಮನಸ್ಸೇನೋ ಇರುತ್ತೆ. ಆದ್ರೆ ಒಳಗೊಳಗೇನೋ ಅಳುಕು. ಎಲ್ಲಿ ನೆಗಡಿ, ಜ್ವರ ಶುರುವಾಗಿ ಕಂಬಳಿಯೊಳಕ್ಕೆ ಸೇರ್ಕೋಬೇಕಾಗುತ್ತೋ ಅನ್ನೋ ಭಯ. ಹೌದು. ಮುಂಗಾರು ಶುರುವಾಗುವಾಗ ಶೀತ ಸಂಬಂಧಿ ಕಾಯಿಲೆಗಳೂ ಆರಂಭವಾಗಿರುತ್ತೆ. ಪರಿಚಯದ ನೆಂಟರಂತೆ ಆಗಮಿಸುವ ಇದು ನಮ್ಮನ್ನು ಇನ್ನಿಲ್ಲದಂತೆ ಗೋಳು ಹೊಯ್ಯುತ್ತೆ ಅನ್ನೋದು ಬೇರೆ ಮಾತು.
ಚಿಕ್ಕಂದಿನಲ್ಲಿ ಮಳೆಯ ಮೊದಲ ಹನಿ ಭೂಮಿಗೆ ಸೋಕುವಾಗ ಅಮ್ಮ ನಮ್ಮನ್ನೆಲ್ಲಾ ಕರೆದು ಬಟ್ಟೆ ಬಿಚ್ಚಿಸಿ ಅಂಗಳದಲ್ಲಿ ನಿಲ್ಲಿಸುತ್ತಿದ್ದಳು. ಮೇಲಿಂದ ಬೀಳುವ ಮುಂಗಾರಿನ ರಸಧಾರೆಗೆ ಮೈಮನ ಪುಳಕವಾಗುತ್ತಿತ್ತು. ಅಮ್ಮ ಮನೆಯ ಮುಂದಿನ ಬಾಗಿಲಿನಲ್ಲಿ ನಿಂತು ನಮ್ಮನ್ನೆಲ್ಲಾ ಗದರಿಸಿ ಕೂಗಿದರೂ ನಾವು ಮನೆಯೊಳಕ್ಕೆ ಬರುತ್ತಿರಲಿಲ್ಲ. ಅಪ್ಪನ ಜೋರು ಸ್ವರ ಕಿವಿಗೆ ಬೀಳಬೇಕಾಗಿತ್ತು, ನಾವು ಮಳೆಸ್ನಾನ ಮಾಡುವುದನ್ನು ನಿಲ್ಲಿಸಲು. ಮಳೆ ಬಂತಂದ್ರೆ ಕುಟ್ಟಿ ದೊಣ್ಣೆ (ಈಗಿನ ಕ್ರಿಕೆಟ್) ಆಟ ಸಂಪೂರ್ಣ ಬಂದ್. ಅದರ ಬದಲಿಗೆ ಮಳೆಯ ಹರಿವ ನೀರಿನಲ್ಲಿ ಕಾಗದದ ದೋಣಿ ತಯಾರಿಸಿ ತೇಲಿಬಿಡುವ ನಮ್ಮ ಆಟ ಶುರುವಿಟ್ಟುಕೊಳ್ಳುತ್ತಿತ್ತು. ದೋಣಿ ಬಿಡುವುದು, ಹಳೆಯ ಸೈಕಲ್ನ ಪಂಕ್ಚರ್ ಆದ ಟಯರ್ ಹೊಡೆದುಕೊಂಡು ಸುರಿವ ಮಳೆಯನ್ನು ಲೆಕ್ಕಿಸದೆ ಹಳ್ಳ ಕೊಳ್ಳಗಳನ್ನು ದಾಟಿ ಸಾಗುತ್ತಿದ್ದೆವು. ಇದರಿಂದ ಮನಸ್ಸಿಗೆ ಏನೋ ಸಂತಸ. ಹೊತ್ತು ಏರತೊಡಗಿದಾಗ ಅಮ್ಮನ ನೆನಪಾಗುತ್ತಿತ್ತು. ಮನೆ ಸೇರಿದರೆ ಮನೆಯ ತುಂಬಾ `ಅಕ್ಷೀ ಅನ್ನೋ ಸದ್ದು. ಸಂಜೆಗೆ ಅಪ್ಪನ ಬೈಗುಳ ಕೇಳುತ್ತಾ ಅಮ್ಮ ತಯಾರಿಸಿಕೊಟ್ಟ ಒಳ್ಳೆಮೆಣಸು, ಶುಂಠಿಯ ಕಷಾಯ ಕುಡಿಯುತ್ತಿದ್ದರೆ ಮನಕ್ಕೆ ಆಹ್ಲಾದವೆನಿಸುತ್ತಿತ್ತು. ಇವೆಲ್ಲಾ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟರೂ ಮರೆಯಲಸಾಧ್ಯವಾದ ನೆನಪುಗಳು.
ಆಗ ಈಗಿನಂತೆ ರೋಗ ರುಜಿನಗಳ ಭಯವಿರಲಿಲ್ಲ. ಈಗಿನವರು ಇದಕ್ಕೆ ಕಾಲ ಚೆನ್ನಾಗಿತ್ತು ಅಂತ ಹೇಳ್ತಾರೆ. ಕಾಲ ಚೆನ್ನಾಗಿತ್ತೋ, ಜನ ಚೆನ್ನಾಗಿದ್ದರೋ ಗೊತ್ತಿಲ್ಲ. ಸುರಿಯುವ ಮಳೆಯಾದರೇನು, ಸುಡುವ ಬಿಸಿಲಾದರೇನು, ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿದ್ದೆವು. ನಿಮ್ಮ ಅಜ್ಜ, ಅಜ್ಜಿಯರಿಗೆ ಕೇಳಿ ನೋಡಿ, ಅವರಿಗೆ ಈಗಿನಂತೆ ಜ್ವರ ಬರೋದು, ಹಾಸಿಗೆ ಹಾಸಿ ಮಲಗೋದು ಗೊತ್ತೇ ಇರಲಿಲ್ಲ. ಮಳೆಗಾಲ ಬಂತಂದ್ರೆ ಹಲಸಿನ ಹಣ್ಣುಗಳ ವಿವಿಧ ಬಗೆಯ ತಿನಸುಗಳು, ಪದಾರ್ಥಗಳು ಎಲ್ಲಾ ಕಡೆ ಸಾಮಾನ್ಯವಾದರೂ ಮಲೆ ನಾಡಿನಲ್ಲಿ ತುಸು ಹೆಚ್ಚೇ ಎನ್ನಬಹುದು. ಪ್ರತೀದಿನ ಬಿಡದೆ ಹಲಸಿನ ಹಣ್ಣಿನ ತಿಂಡಿಯನ್ನು ತಿಂದರೂ ಆರೋಗ್ಯ ಹದಗೆಡುತ್ತಿರಲಿಲ್ಲ. ಮಳೆಗಾಲ ಆರಂಭವಾಗುತ್ತೆ ಅನ್ನೋವಾಗ ಕಾಯಿ ಹಲಸನ್ನು ಕೊಯ್ದು ತಂದು ಮನೆಯಲ್ಲಿ ಬೇರ್ಪಡಿಸಿ ಉಪ್ಪು ಹಾಕಿ ಭರಣಿಯಲ್ಲಿ ಶೇಖರಿಸುತ್ತಿದ್ದರು. ಇದರಿಂದ ಮುಂದಿನ ಮಳೆಗಾಲ ಮುಗಿಯೋ ತನಕ ಪದಾರ್ಥ ಮಾಡಲು ಪರದಾಡಬೇಕಿರಲಿಲ್ಲ. ಮನೆಗೆ ನೆಂಟರು ಬಂದರೆ ಮಕ್ಕಳಾದ ನಮ್ಗೆ ಅದೇನೋ ಖುಷಿ, ಅಮ್ಮ ಯಾವಾಗ ಉಪ್ಪು ನರಿನಲ್ಲಿ ಹಾಕಿಟ್ಟ ಹಲಸಿನ ತೊಳೆಗಳನ್ನು ತೆಗೆಯ್ತಾರೋ ಅಂತ ಕಣ್ಣುಬಾಯ್ಬಿಟ್ಟು ಕಾಯ್ತಾ ಇದ್ದೆವು. ಅದರ ಪದಾರ್ಥದ ಆ ಪರಿಮಳ ಈಗಲೂ ಬಾಯಲ್ಲಿ ನೀರೂರಿಸುತ್ತೆ.
ಮಳೆಗಾಲದಲ್ಲಿ ಯತೇಚ್ಫವಾಗಿ ಸಿಗುವ ಕೆಸುವಿನ ಎಲೆ, ದಂಟು, ವಿವಿಧ ಬಗೆಯ ಸೊಪ್ಪುಗಳು ನಾಲಗೆಗೆ ರುಚಿಯನ್ನು ಒದಗಿಸುವುದರ ಜತೆಗೆ ಔಷಧೀಯ ಗುಣವನ್ನೂ ನಮಗೆ ಒದಗಿಸುತ್ತೆ. ಮಲೆನಾಡಿನ ಗುಡ್ಡಗಳಲ್ಲಿ ಬೇಕಾದಷ್ಟು ಸಿಗುವ ಕಲ್ಲಣಬೆಯ ಪದಾರ್ಥದ ಸವಿಯನ್ನಂತೂ ಸವಿದವರೇ ಬಲ್ಲರು. ಆದ್ರೆ ಈಗ ಕಾಲ ಬದಲಾಗಿದೆ. ಮನುಷ್ಯ ಬದಲಾದಂತೆ ಸಹಜವಾಗಿ ಈ ಹಸಿರ ಪ್ರಕೃತಿಯೂ ಬದಲಾಗಿದೆ. ಪ್ರಕೃತಿಯ ಜತೆಗೆ ಮನುಷ್ಯನಿಗೆ ನಾನಾ ರೀತಿಯ ರೋಗ ಭಯಗಳೂ ಶುರುವಾಗಿದೆ.
`ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋ ಹಾಗೆ, ನಮಗೊಂದು ಕಾಲ, ಸೊಳ್ಳೆಗಳಿಗೊಂದು ಕಾಲ ಬರಲೇ ಬೇಕು ತಾನೆ? ಮಳೆಗಾಲ ಆರಂಭವಾದಾಗ ಸೊಳ್ಳೆಗಳ ಹಾರಾಟವೂ ಜಾಸ್ತಿಯಾಗಿ ಮನುಷ್ಯನಿಗೆ ಇನ್ನಿಲ್ಲದ ಕಾಟ ಕೊಡಲು ಶುರುವಾಗುತ್ತದೆ. ಮಲೇರಿಯಾ, ಡೆಂಗ್ಯೂನಂತಹ ಮಾರಣಾಂತಿಕ ರೋಗಗಳು ಮಳೆಗಾಲದ ಉಚಿತ ಉಡುಗೊರೆಯೆಂದರೆ ತಪ್ಪಾಗಲಾರದು. ಈಗಂತೂ ಹೊಸದಾದ ಚಿಕೂನ್ ಗುನ್ಯಾ ಕರಾವಳಿ ಪ್ರದೇಶದಲ್ಲಿ ನಿತ್ಯ ಸುದ್ದಿ ಮಾಡುತ್ತಿದೆ. ಆ ಮಟ್ಟಿಗೆ ಹೇಳುವುದಾದರೆ ಮಲೆನಾಡಿನ ನಾವೇ ಧನ್ಯರು ಅನ್ನಬಹುದು. ನಮ್ಮಲ್ಲಿ ಈಗಲೂ ಅದೇ ಹಳೆಯ ಸಂಪ್ರದಾಯಬದ್ಧ ತಿನಿಸುಗಳು ಪದಾರ್ಥಗಳು ದಿನದ ಊಟದಲ್ಲಿ ಇದ್ದೇ ಇರುತ್ತೆ. ನನ್ಗಂತೂ ವಾರಾಂತ್ಯದ ದಿನದಲ್ಲಿ ನಮ್ಮೂರು ಕೈ ಬೀಸಿ ಕರೆಯುತ್ತೆ. ಅಮ್ಮನ ಸ್ವಾದಿಷ್ಟ ತಿನಸು, ಹಲಸಿನ ಪದಾರ್ಥ ಇವೆಲ್ಲಾ ತಿಂದಷ್ಟೂ ಸಾಲದು. ನಮ್ಮೂರು ಬೆಟ್ಟ, ಗುಡ್ಡಗಳ ಹಸಿರು ವನಗಳಿಂದ ಸುತ್ತುವರಿದಿದ್ದರೂ ರೋಗ ಹರಡುವ ಸೊಳ್ಳೆಗಳಿಲ್ಲ.
ಹಾಗಾಗಿ ಮಲೆಗಾಲಕ್ಕೆ ಮಲೆನಾಡೇ ಸರಿ. ಏನಂತೀರಾ?

ಮಳೆ ಬರುವ ಕಾಲಕ್ಕೆ...




ಮಳೆ ಬರುವ ಕಾಲಕ್ಕಾ...


ಮಳೆ ಬಂತೂ... ಮಳೆ ಇದೇನಪ್ಪಾ... ಇನ್ನೂ ಮಳೇನೇ ಬಲರ್ಿಲ್ಲ, ಆವಾಗ್ಲೇ ಮಳೆ ಬಂತು ಅಂತ ಹೇಳ್ತಿದ್ದಾನೆ ಅಂತ ತಿಳ್ಕೋಬೇಡಿ. ಈ `ಮುಂಗಾರು ವಷರ್ಾನುವರ್ಷ ನಿಗದಿತ ಸಮಯಕ್ಕೆ ಬರುತ್ತೆ ಅಂತ ನಾವೇನೋ ತಿಳ್ಕೊಂಡಿರ್ತೇವೆ. ಆದ್ರೆ ಈ ಮುಂಗಾರಿನ ಆರಂಭಕ್ಕೆ ಹೊತ್ತು ಗೊತ್ತು ಅನ್ನೋದೇ ಇರಲ್ಲ. ಕಳೆದ ವರ್ಷ ತುಸು ತಡವಾಗಿ ಆಗಮಿಸಿದ್ದರೆ ಈ ವರ್ಷ ಸದ್ದಿಲ್ಲದೆ ಆಗಮಿಸಿರುತ್ತೆ. ಇನ್ನೇನು ವಾರ ಕಳೆಯುವಷ್ಟರಲ್ಲಿ ಮಳೆಗಾಲ ಆರಂಭವಾಗಿರುತ್ತೆ. ಬಹುಷ: ಈ ಸಲಾನೂ ಮಳೆ ಬೇಗ ಬರುತ್ತೆ ಅಂತ ನೀವುಗಳು ತಿಳ್ಕೊಂಡಿರ್ಬೇಕು ತಾನೇ? ಹುಡ್ಗೀರು ಕೊಡೆ ಹಿಡಿದು ನಡೆಯಲು ಅಭ್ಯಾಸ ಮಾಡ್ಕೋಬೇಕು ತಾನೇ? ಅದಕ್ಕೇ ಹೇಳಿದ್ದು. ನನ್ಗಂತೂ ಯಾಕೋ ಈ ಮಳೆ ಆರಂಭವಾಗುತ್ತೆ ಅಂತ ರೇಡಿಯೋದಲ್ಲಿ ಸುದ್ದಿ ಬಂದ್ರೆ ಸಾಕು, ಭಯ ಶುರುವಾಗುತ್ತೆ. ಅಂದ್ರೆ ನಾನು ಮಳೆಗಾಲದ ವಿರೋಧಿ ಅಂತಾ ತಿಳೀಬೇಡಿ. ಆದ್ರೂ ಮುಂಗಾರು ಅನ್ನೋ ಪದ ಕೇಳಲಷ್ಟೇ ಸೊಗಸು. ಆದ್ರೆ ಈ ಮುಂಗಾರು ಮಳೆ ಅವೇಳೆಯಲ್ಲಿ ಸುರಿದು ಹಾನಿ ಮಾಡೋದು ನೋಡಿದ್ರೆ ಯಾಕಪ್ಪಾ ಬಂತು ಅಂತಾ ಅನ್ನಿಸದಿರದು. ಈ ಸಲಾನೂ ಮುಂಗಾರು ಒಂದು ವಾರಗಳ ಮುಂಚೆ ಕೇರಳಕ್ಕೆ ಆಗಮಿಸುತ್ತೆ ಅಂತ ನಮ್ಮ ಅ(ಹ)ವಮಾನ ಇಲಾಖೆ ಈಗಾಗ್ಲೇ ಹೇಳಿಬಿಟ್ಟಿದೆ. ಹೀಗಾಗಿ ತಿಂಗಳ ಕೊನೆಗೆ ಮಳೆ ಸುರಿಯುವ ಸಾಧ್ಯತೆಯೂ ಇದೆ. ಏನಾದ್ರಾಗಲಿ... ಒಮ್ಮೆ ಮಳೆ ಸುರಿದ್ರೆ ಸಾಕಪ್ಪಾ ದೇವ್ರೇ, ಅಂತ ನಮ್ಮೂರಿನ ರೈತರೆಲ್ಲಾ ಆವಾಗ್ಲೇ ಹರಕೆ ಹೊತ್ತಿದ್ದಾರೆ. ಸುಡುಸುಡು ಬಿಸಿಲ ನಡುವೆ ನೇಗಿಲ ಯೋಗಿ ನಿಡುಸುಯ್ಯುತ್ತಿದ್ರೆ ಅಯ್ಯೋ ಪಾಪ ಅಂತನ್ನಿಸುತ್ತೆ. ಮಳೆ ಬರುವ ಕಾಲಕ್ಕಾ... ಒಳಗ್ಯಾಕ ಕುಂತೀರಿಮೋಡಗಳ ಆಟಾ ನೋಡೋಣ ಅಂತ ನಮ್ಮೂರಿನ ರೈತರು ಇತರರನ್ನು ಕರೆದು ಗದ್ದೆಯ ಕೆಲಸ ಮಾಡಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಗದ್ದೆಯಲ್ಲಿದ್ದ ಕಸವನ್ನು ತೆಗೆದು ಅದಕ್ಕೆ ಬೆಂಕಿ ಹಾಕಿ ಸುಟ್ಟ ಗೊಬ್ಬರವನ್ನು ಉಳುಮೆಗೆ ಬಳಸಲು ರೈತ ಗದ್ದೆಯಲ್ಲಿ ಪೇರಿಸಿಟ್ಟ ದೃಶ್ಯ ನಮ್ಮಲ್ಲಿ ಮಾಮೂಲು. ಪಟ್ಟಣದಲ್ಲಿ ಮುಂಗಾರು ಅಷ್ಟೊಂದು ವಿಶೇಷತೆಯನ್ನು ಪಡೆಯದೇ ಇದ್ರೂ ಹಳ್ಳಿಗಳಲ್ಲಿ ಮಾತ್ರ ಇದು ರೈತರ ಬಹುದಿನಗಳ ಕನಸಂತೆ ಸುರಿಯುತ್ತೆ. ಹಳ್ಳಿಯ ರೈತನೊಬ್ಬ ಮಳೆ ಆರಂಭವಾಗುವ ಈ ಕಾಲಕ್ಕೆ ಎಷ್ಟೊಂದು ಹರುಷ ಚಿತ್ತನಾಗುತ್ತಾನೆಂದರೆ, ಆತನಿಗೆ ಮಳೆಯನ್ನೋದು ಮಣ್ಣಲ್ಲಿ ಬಂಗಾರ ಬೆಳೆಸುವ ಅಮೃತ ಸಿಂಚನವಿದ್ದಂತೆ. ರೈತ ಖುಷಿಪಟ್ಟರೆ ತಾನೇ ಪಟ್ಟಣಿಗರ ಬಾಳು ಹಸಾನಾಗೋದು..? ನಮ್ಮೂರಲ್ಲಂತೂ ಈ ಮುಂಗಾರಿನ ಹನಿ ಭೂಮಿಗೆ ಸೋಕುತ್ತೆ ಅಂತ ಸಿಡಿಲು, ಮಿಂಚು ರೈತನನ್ನು ಎಚ್ಚರಿಸಿದರೆ ಸಾಕು, ಆತ ತನ್ನ ಎತ್ತು, ಕೋಣವನ್ನು ಗದ್ದೆಗೆ ಹೊಡೆದುಕೊಂಡು ಹೋಗಿ ಸುರಿಯುವ ಬಿರುಮಳೆಯನ್ನು ಲೆಕ್ಕಿಸದೆ ಗದ್ದೆ ಉತ್ತರಷ್ಟೇ ರೈತನಿಗೆ ಸಮಾಧಾನ. ಸಿಡಿಲು-ಮಿಂಚುಗಳ ಸಮ್ಮಿಲನವೇ ದುಡಿಯುವ ರೈತನ ಕಿವಿಗಳಿಗೆ ಇಂಪಾದ ಸಂಗೀತದಂತೆ ಕೇಳಿಸುತ್ತಿರುತ್ತೆ. ತನ್ನದೇ ಗುಂಗಿನಲ್ಲಿ ಓಬೇಲೆ... ಹಾಡಿದನೆಂದರೆ ಮುಗೀತು ಮಳೆಗಾಲ ಆರಂಭವಾದಂತೆಯೇ. ಚಿಕ್ಕ ಮಕ್ಕಳಿರುವಾಗ ನನ್ಗೂ ಈ ಮುಂಗಾರು ಬಂದ್ರೆ ಏನೋ ಖುಷಿ, ಸುರಿಯುವ ಮಳೆಗೆ ನಮ್ಮೂರ ಕೆರೆ ತುಂಬಿ ಶಾಲೆಗೆ ರಜೆ ಎಂದು ತಿಳಿದಿದ್ರೂ ಮಳೆಯಲ್ಲಿ ನೆನೆದು ಶಾಲೆಗೆ ಹೋಗುವ ಆಸೆ. ಬಿರುಬಿಸಿಲಿಗೆ ಶಾಲೆಗೆ ಚಕ್ಕರ್ ಹಾಕಿ ಹೊಟ್ಟೆನೋವೆಂದು ಮಲಗುತ್ತಿದ್ದವನು ಮಳೆಯಲ್ಲಿ ಬೇಗನೇ ಎದ್ದು ಶಾಲೆಗೆ ಹೊರಡುವುದು ನೋಡಿ ಅಮ್ಮನಿಗೆ ಅಚ್ಚರಿ. ನಮ್ಮೂರು ನಿಸರ್ಗದ ಅದ್ಭುತ ಸೌಂದಯರ್ಾನಾ ಸವಿಯಲು, ಅದೂ ಮುಂಗಾರಿನ ಮಜಾ ಕಣ್ತುಂಬಿಕೊಳ್ಳಲು ಹೇಳಿ ಮಾಡಿಸಿದ ಊರು. ಅತ್ತ ಬೆಟ್ಟಗುಡ್ಡಗಳ ಸಾಲು ಮಳೆರಾಯನನ್ನು ಕೈ ಬೀಸಿ ಕರೆದರೆ, ಮುಂಗಾರಿನ ಅಭಿಷೇಕಕ್ಕೆ ಭೂರಮೆಯು ಹಸಿರ ಆಭರಣ ಧರಿಸಿ ಖುಷಿಯಲ್ಲಿ ನಲಿದಾಡಿದ ಅನುಭವ. ಹತ್ತಿರದ ನದಿಯೊಂದು ಮಳೆ ನೀರಿಗೆ ತುಂಬಿ ತುಳುಕುವ ದೃಶ್ಯ ನೋಡಿಯೇ ಸವಿಯಬೇಕು. ಬಾಲ್ಯದಲ್ಲಿ ಮುಂಗಾರಿನ ಆರಂಭದ ದಿನ ನಮ್ಮನ್ನೆಲ್ಲಾ ಅಮ್ಮ ಅಂಗಳದಲ್ಲಿ ಮಳೆ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಹೊರಗೆ ಧೋ ಎಂದು ಸುರಿವ ಮಳೆಯ ನಡುವೆ ಅಮ್ಮನ ಮಡಿಲಲ್ಲಿ ಕುಳಿತು ಅಜ್ಜಿ ಮಾಡಿ ಡಬ್ಬ ತುಂಬಿಸಿದ್ದ ಮಳೆಗಾಲದ ಸ್ಪೆಷಲ್ ತಿಂಡಿಯನ್ನು ತಿನ್ನುತ್ತಿದ್ರೆ, ಇಂತಹ ಮಳೆಗಾಲ ತಿಂಗಳಿಗೊಮ್ಮೆ ಬರಲಿ ಅಂತನ್ನಿಸ್ತಾ ಇತ್ತು.ಕಾಲ ಬದಲಾದಂತೆ ಈಗ ಹಿಂದಿನ ಉತ್ಸಾಹವಿಲ್ಲ. ಬಿತ್ತಿದ್ದು ಬೆಳೆಯದೆ ರೈತ ಉತ್ಸಾಹ ಕಳೆದುಕೊಂಡಿದ್ದಾನೆ. ಮಳೆ ಬರುತ್ತೆ... ಆದ್ರೆ ಆ ಮಳೆ ಖುಷಿಯನ್ನು ತರಲ್ಲ, ನಾವು ಮಾಡಿದ ಬೆಳೆಯನ್ನೆಲ್ಲಾ ಕೊಚ್ಚಿಕೊಂಡು ಹೋದಾಗ ಬದುಕು ಬಾರ ಆಗದಿರುತ್ತಾ? ಅದೇ ಮುಂಗಾರು ಮಳೆ... ಹಿಂದಿನ ಉತ್ಸಾಹವಿಲ್ಲ, ಗದ್ದೆಯಲ್ಲಿ ಕೋಣಗಳ ಬದಲಿಗೆ ಮೆಷಿನ್ಗಳು ಬಂದಿವೆ. ಓಬೇಲೆಯ ಪದವಿಲ್ಲ, ಟ್ರ್ಯಾಕ್ಟರ್ ಎಂಜಿನ್ನಿನ ಸದ್ದು ದೂರದ ತನಕ ಕಿವಿಗಪ್ಪಳಿಸುತ್ತೆ.ಮುಂದೆ ಬರಲಿರುವ ಮುಂಗಾರು ರೈತನಿಗೆ ಸುಖ, ಸಮೃದ್ಧಿ ತರಲಿ. ಕಂಡ ಕನಸು ನನಸಾಗಿ ಹಸಿರು ಪೈರು ಹೊಲ ಗದ್ದೆ ತುಂಬಲಿ ಎನ್ನುವ ಹಾರೈಕೆಯೊಂದಿಗೆ...