doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, November 13, 2010

ಕಾ(ಬೇ)ಡುವ ಮುಗ್ಧ ಕನಸುಗಳು..





ಅಣ್ಣಾ... ಒಂದು ರೂಪಾಯಿ ಕೊಡಣ್ಣಾ... ಹಸಿವಾಗುತ್ತೆ...

ನಾನು ನನ್ನದೇ ಅವಸರದಲ್ಲಿ ನಡೆಯುತ್ತಿರುವಾಗ ಇಂತಹ ಕೂಗೊಂದು ಬಾರಿ ಬಾರಿ ಕೇಳುತ್ತದೆ. ಅದು ಒಂದೆರಡು ಬಾರಿಯಲ್ಲ... ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಈ ಕೂಗು ನನಗೊಬ್ಬನಿಗೆ ಮಾತ್ರವಲ್ಲ... ಬಹುಷ: ಬಾಕಿ ಉಳಿದವರಿಗೂ ಈ ಕೂಗು ಕೇಳಿರುತ್ತದೆ ಎಂದು ಭಾವಿಸುತ್ತೇನೆ. ಆದರೆ ಅಂತಹ ಕೂಗು ಮಾಮೂಲಿಯಾದ್ದರಿಂದ ಯಾರೂ ಅತ್ತ ತಿರುಗಿ ನಡೆಯಲಾರರು. ನನ್ನಂತೆ ಮಾಡಲು ಬೇರೆ ಕೆಲಸವಿಲ್ಲದ ಕೆಲವರಾದರೂ ಈ ಕೂಗು ಬಂದಕಡೆ ತಿರುಗಿ ಏನೆಂದು ವಿಚಾರಿಸುತ್ತಾರೆ. ಕಿಸೆಯನ್ನು ತಡಕಾಡಿ ಸಿಕ್ಕಿದ ಬಿಡಿಗಾಸು ಇವರ ತಟ್ಟೆಗೆ ಬಿಸಾಡಿ ಮುಂದೆ ಸಾಗುತ್ತಾರೆ. ಇದನ್ನು ಕಥೆಯೆಂದು ಭಾವಿಸದಿರಿ. ಇದು ನಮ್ಮ ಮಂಗಳೂರು ಅಥವಾ ನೆರೆಯ ಉಡುಪಿ ಜಿಲ್ಲೆಯ ಪ್ರಧಾನ ಬಸ್ ತಂಗುದಾಣಗಳಲ್ಲಿ ಕಂಡು ಬರೋ ಬೀದಿ ಮಕ್ಕಳ ತೀರದ ವ್ಯಥೆ..!

ಇಂದು ಮಕ್ಕಳ ದಿನಾಚರಣೆ... ಮಕ್ಕಳನ್ನು ಒಂದು ದಿನದ ಮಟ್ಟಿಗಾದರೂ ಮಾನಸಿಕ ಕಿರಿಯಿಂದ ದೂರವಿರಿಸಿ ಅವರಲ್ಲಿ ಸ್ಫೂತರ್ಿಯ ಸೆಲೆ ತುಂಬಿಸುವ ಸಲುವಾಗಿ ಶಿಕ್ಷಣ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಈ ದಿನವನ್ನು ಭಾರೀ ಗೌಜಿಯಿಂದ ಆಚರಿಸುತ್ತವೆ. ಇಂದಿನ ದಿನವಾದರೂ ಮಕ್ಕಳನ್ನು ಖುಷಿಯಿಂದ ಇರಿಸಿ, ಮಕ್ಕಳೊಂದಿಗೆ ಮಕ್ಕಳಾಟ ಆಡುತ್ತಾ ಕಾಲ ಕಳೆಯೋಣ ಅನ್ನೋದು ಶಿಕ್ಷಕರ ಅಥವಾ ಇಂತಹ ಸಂಘಟನೆಗಳ ಉದ್ದೇಶವಾಗಿರಲೂಬಹು. ಆದ್ರೆ ಈ ಹೊತ್ತಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೇಲಿನ ಸನ್ನಿವೇಶದ ಬಗೆ ಕಿಂಚಿತ್ತಾದರೂ ಯೋಚಿಸಲೇಬೇಕು.

ಮಕ್ಕಳು ದೇವರ ಸಮಾನ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಅವರು ಹೋದಲ್ಲಿ ಬಂದಲ್ಲಿ ಮಕ್ಕಳ ಜೊತೆ ಬೆರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಅನ್ನೋ ಮಾತನ್ನು ಪ್ರಾಥಮಿಕ ಶಾಲೆಯಿಂದ ಇಂದಿನವರೆಗೆ ಕೇಳುತ್ತಲೇ ಇದ್ದೇವೆ. ಆದರೆ ಈ ದಿನಾಚರಣೆಯಂದು ಬೀದಿಗೆ ಬಿದ್ದ ಮಕ್ಕಳನ್ನು ಉಪಚರಿಸುವ ಕೆಲಸವನ್ನು ಯಾರಾದರೂ ಮಾಡಲು ಮುಂದಾಗುತ್ತಾರಾ ಅನ್ನೋ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಮಾತ್ರ ಶೂನ್ಯ. ಮಕ್ಕಳು ದೇವರಿಗೆ ಸಮಾನ ಎಂದು ಮನೆಯ ಮಕ್ಕಳನ್ನು ಪ್ರೀತಿಸುತ್ತಾ, ಅವರು ಕೇಳಿದ್ದು ಸಾವಿರ ಬೆಲೆಯದ್ದಾದರೂ ಹಿಂದೆ-ಮುಂದೆ ಯೋಚಿಸದೆ ತಂದುಕೊಡುವ ನಾವುಗಳು ಅದೇ ಬೀದಿಯ ಮಕ್ಕಳನ್ನು ಕಂಡಾಗ ಮುಖ ತಿರುಗಿಸಿ ನಡೆಯುವುದೇಕೆ?

ಉಡುಪಿ ಶ್ರೀ ಕೃಷ್ಣನ ನೆಲೆವೀಡು. ಇಲ್ಲಿನ ಅಷ್ಟಮಠಗಳಲ್ಲಿ ಸಂಪತ್ತು ಉಕ್ಕಿ ಹರಿಯುತ್ತಿದೆ. ದೇವಳದ ಜಾಗವೆಂದು ಹೇಳಲಾಗುವ ಸ್ಥಳದಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಭವ್ಯ ಕಟ್ಟಡಗಳು ಮೇಲೇರುತ್ತಿವೆ. ಇಲ್ಲಿನ ಆದಾಯ ಕೋಟಿಗೂ ಅಧಿಕ. ಹೀಗಿದ್ದರೂ ಇಲ್ಲಿಗೆ ಬೀದಿಗಳಲ್ಲಿ ಅದೇ ಹರಕು-ಮುರುಕು ಬಟ್ಟೆಯ ಸಣ್ಣಪುಟ್ಟ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಅಣ್ಣಾ... ಎಂದು ಬೆನ್ನು ಬೀಳುತ್ತವೆ. ಇವರಿಂದ ಪಾರಾದರೆ ಸಾಕು ಎಂದು ಓಡುವ ಮಂದಿಯೆಷ್ಟೋ ಇರಬಹುದು. ಆದರೆ ತಿರುಗಿ ನಿಂತು ಇವರ ಕಷ್ಟ ಕೇಳಿದಾಗ ಮಾತ್ರ ಒಂದು ದಿನದ ಆಚರಣೆ, ಸರಕಾರದ ಸೋಗಲಾಡಿತನ, ಸಾಮಾಜಿಕ ಸಂಘಟನೆಗಳ ಹೊಣೆಗೇಡಿತನ ಮನಸ್ಸಿಗೆ ನಿಜಕ್ಕೂ ಬೇಸರ ತರಿಸದಿರದು.

ಪಾಟರ್್ ಟೈಂ ಭಿಕ್ಷಾಟಣೆ:

ಆತನ ಹೆಸರು ಹನುಮಂತ... ಸೂರ್ಯ ಮುಳುಗುವ ಹೊತ್ತು ಉಡುಪಿಯ ಹೊಸ ಸರಕಾರಿ ಬಸ್ ನಿಲ್ದಾಣಕ್ಕೊಮ್ಮೆ(ಈಗ ಹಳತಾಗಿದೆ) ನೀವು ಕಾಲಿಟ್ಟರೆ ಅಲ್ಲಿ ಎಲ್ಲಾದರೊಂದು ಕಡೆ ಕಂಬದ ಮರೆಯಲ್ಲಿ ನಿಂತು ತನ್ನ ಅಷ್ಟಿಷ್ಟು ಹರಿದ ನೀಲಿ ಚೆಡ್ಡಿಯಿಂದ ನಾಣ್ಯಗಳನ್ನು ಒಂದೊಂದಾಗಿ ತೆಗೆದು ಲೆಕ್ಕ ಮಾಡುತ್ತಿರುತ್ತಾನೆ. ಈತನನ್ನು ನೀವು ನೋಡಿದ್ದು ಗೊತ್ತಾದರೆ ಸಾಕು, ನಿಮ್ಮ ಹಿಂದೆಯೇ ಓಡಿ ಬರುತ್ತಾನೆ. ಹಣ ನೀಡದ ಹೊರತು ಆತ ನಿಮ್ಮನ್ನು ಬಿಡುವುದಿಲ್ಲ. ಅಂದಹಾಗೆ ಹನುಮಂತ ನಿರ್ಗತಿಕನಲ್ಲ. ಉಡುಪಿ ಸಮೀಪದ ದೊಡ್ಡಣಗುಡ್ಡೆಯ ಡೇರೆಯಲ್ಲಿ ತಂದೆ-ತಾಯಿ, ತಂಗಿಯ ಜೊತೆ ವಾಸ ಮಾಡುತ್ತಾನೆ. ಮೂರನೇ ಕ್ಲಾಸು ಕಲಿಯುವ ಹನುಮಂತ ಶಾಲೆಯಿಂದ ಬಂದ ಬಳಿಕ ತಾಯಿಯೇ ಭಿಕ್ಷೆ ಎತ್ತಲು ಕಳುಹಿಸುತ್ತಾಳೆ. ಕಾರಣ ಬಿಲ್ಡಿಂಗ್ ಕಾಮಗಾರಿಗಳಲ್ಲಿ ದುಡಿಯುವ ಹನುಮಂತನ ತಂದೆ ಎಂಬ ರಾಕ್ಷಸನ ಕಿರಿಕಿರಿ. ಪ್ರತೀ ರಾತ್ರಿ ಕುಡಿದು ಇದ್ದ ಹಣವೆಲ್ಲಾ ಅಲ್ಲಲ್ಲಿ ಸಂದಿಗೊಂದರಂತೆ ಇರುವ ಮಟ್ಕಾ ಅಡ್ಡೆಯಲ್ಲಿ ಕಳೆದು ಬರುವ ತಂದೆ ಎಂಬ ಪ್ರಾಣಿ ಹನುಮಂತನ ಶಾಲೆಗೆ ನಯಾಪೈಸೆ ನೀಡುವುದಿಲ್ಲವಂತೆ. ಈ ಕಾರಣಕ್ಕಾಗಿ ಭಿಕ್ಷೆ ಎತ್ತುತ್ತಿದ್ದೇನೆ ಎನ್ನುವ ಹನುಮಂತನ ದಿನವೊಂದರ ಸಂಪಾದನೆ 30ರಿಂದ 40 ರೂಪಾಯಿ. ಕಲಿತು ಏನಾಗುತ್ತೀ ಎಂದು ಕೇಳಿದರೆ, `ಅದೆಲ್ಲ ಯಾಕಣ್ಣಾ ನನ್ಗೆ ಒಂದು ರೂಪಾಯಿ ಕೊಡಿ ಎನ್ನುವ ಮುಗ್ಧ ಬಾಲಕನ ಕನಸೇ ಇಲ್ಲದ ಮಾತುಗಳು ಮನಸ್ಸಿನಾಳಕ್ಕೆ ನೇರವಾಗಿ ಈಟಿಯಂತೆ ಇರಿಯುತ್ತದೆ. ಇದು ಓರ್ವ ಹನುಮಂತನ ಕಥೆಯಲ್ಲ, ಬೀದಿಯಲ್ಲಿ ಒಮ್ಮೆ ತಿರುಗಾಡಿದರೆ ಸಾಕು ಇಂತಹ ಹತ್ತಾರು ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತದೆ.

ಲಕ್ಷ್ಮಿ, ಮಂಜುಳಾ, ದ್ಯಾಮವ್ವ...

ಉಡುಪಿಯ ಸಿಟಿ, ಸವರ್ಿಸ್, ಸರಕಾರಿ ಬಸ್ ನಿಲ್ದಾಣಗಳನ್ನು ತಮ್ಮ ಖಾಯಂ ನೆಲೆಯನ್ನಾಗಿ ಮಾಡಿಕೊಂಡ ಲಕ್ಷ್ಮಿ, ಮಂಜುಳಾ, ದ್ಯಾಮವ್ವರದ್ದು ಕಥೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತದೆ. ಇವರು ಹೊರಜಿಲ್ಲೆಯ ಕೂಲಿ ಕಾಮರ್ಿಕರ ಮಕ್ಕಳು. ತಂದೆ ಕುಡಿಯಲು ದುಡ್ಡಿಗಾಗಿ ಮಕ್ಕಳನ್ನು ಭಿಕ್ಷೆ ಎತ್ತಲು ಕಳುಹಿಸುತ್ತಾನೆ. ಇವರು ಶಾಲೆಯ ಮುಖವನ್ನೇ ಕಂಡಿಲ್ಲ. ಬೆಳಗ್ಗೆದ್ದು ಬಿಡಾರದಿಂದ ಹೊರಬಿದ್ದು ಬಸ್ ನಿಲ್ದಾಣ ಸೇರಿದರೆ ಮರಳುವುದು ಕತ್ತಲಾವರಿಸಿದ ಬಳಿಕ. ಅದೆಷ್ಟೋ ಮಂದಿಯ ನಾಲಗೆಯಿಂದ ಕೇಳಬಾರದ್ದನ್ನು ಕೇಳಿಸಿಕೊಂಡು, ವಿಕೃತ ಕಾಮುಕರ ಕೆಟ್ಟ ನೋಟಕ್ಕೆ ಸಿಲುಕಿ ಈ ಮಕ್ಕಳು ಭಿಕ್ಷೆ ಬೇಡುತ್ತಲೇ ಇದ್ದಾರೆ. ದಿನವೊಂದಕ್ಕೆ ತಮ್ಮ ಖಚರ್ು ಕಳೆದು 50-60 ರೂಪಾಯಿ ಸಂಪಾದಿಸುತ್ತಾರೆ. ಆದರೆ ಇವರ ಜೋಳಿಗೆ ತುಂಬಿದ ಚಿಲ್ಲರೆ ಹಣ ಎಲ್ಲಾ ಕ್ಷಣಮಾತ್ರದಲ್ಲಿ ಸಾರಾಯಿ ಅಂಗಡಿಯದ್ದೋ, ಮಟ್ಕಾ ಅಡ್ಡೆಯದ್ದೋ ಪಾಲಾಗುತ್ತದೆ.

ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮಕ್ಕಳನ್ನು ಅಲಂಕರಿಸಿ ಖುಷಿಪಟ್ಟರಷ್ಟೇ ಸಾಲದು. ನಮ್ಮ ನೆರೆಮನೆಯ ಮಕ್ಕಳ ಹೊಟ್ಟೆ ತುಂಬಿದೆಯೇ, ಇಲ್ಲವೇ ಎನ್ನುವುದನ್ನು ನೋಡುವುದು ನಮ್ಮ ಕರ್ತವ್ಯವಾಗಬೇಕು. ಮಾಜಿ ಗೃಹ ಸಚಿವರ ತವರೂರಿನಲ್ಲಿ ಮಕ್ಕಳ ಭಿಕ್ಷಾಟಣೆ ನಿರಂತರ ನಡೆಯುತ್ತಲೇ ಇದೆ. ಪೊಡವಿಗೊಡೆಯನ ನಾಡಿನಲ್ಲಿ ಬೀದಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅಷ್ಟಮಠಗಳು, ಯತಿವರ್ಯರು ಮನಸ್ಸು ಮಾಡಬೇಕು.

ಮಕ್ಕಳ ದಿನವನ್ನು ವರ್ಷಕ್ಕೊಂದು ಬಾರಿ ಆಚರಿಸಿ ಸಿಹಿತಿಂಡಿ ತಿಂದು ಸಂತಸ ಪಡುವ ನಾವುಗಳು ಬೀದಿ ಮಕ್ಕಳ ಕನಸಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಶ್ರಮಿಸಬೇಕು. ಇದಕ್ಕಾಗಿಯೇ ಸ್ಥಾಪಿತಗೊಂಡು ಸರಕಾರದ ಹಣವನ್ನು ನುಂಗಿ ನೀರು ಕುಡಿಯುವ ಎನ್ಜಿಓಗಳು ಈ ಬಗ್ಗೆ ಇನ್ನಾದರೂ ಎಚ್ಚರವಾಗಲಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಿಸಲಿ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಆದರೆ ಮಾನವ ಸಮಾಜ ಒಂದಾದಾಗ ಮಕ್ಕಳ ಭಿಕ್ಷಾಟಣೆಗೆ ಖಂಡಿತಾ ಮಂಗಳ ಹಾಡುವುದು ಸಾಧ್ಯ. ಮಕ್ಕಳ ಕೈಯಲ್ಲಿರುವ ತಟ್ಟೆ, ಹೆಗಲಲ್ಲಿರುವ ಜೋಳಿಗೆ ತೆಗೆದು ಅವರ ಬಾಳಿಗೆ ಅಕ್ಷರ ದೀವಿಗೆ ಹಚ್ಚುವವರು ನಾವಾಗೋಣ ಬನ್ನಿ...

ಲಾಸ್ಟ್ಲೈನ್: ಕಳೆಗುಂದಿದ ಮುಖ, ಕೆದರಿದ ಕೂದಲು, ಮಮತೆ, ಪ್ರೀತಿ ವಾತ್ಸಲ್ಯವರಿಯದ ಮುಗ್ಧ ಮನಸ್ಸು, ಸಪ್ಪೆ ಮೋರೆ ಹಾಕಿಕೊಂಡು ಬಂದು ಹೋಗುವವರ ಕಡೆ ಆಶೆಯ ಕಂಗಳ ದೃಷ್ಟಿ ಹರಿಸುತ್ತಾ, ಬೆನ್ನು ಬಿದ್ದು ಮುದ್ದು ಮಾತುಗಳಿಂದ ಕಾಡುವ ನತದೃಷ್ಟ ಮಕ್ಕಳಿಗೆ ಈ ದಿನದ ಶುಭಾಶಯಗಳು.

9 comments:

Ittigecement said...

ಶಶಿಯವರೆ...

ಬಹಳ ಬೇಸರವಾಯಿತು...

ಸ್ವಾಂತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ...
ನಮ್ಮ ಮಕ್ಕಳಿಗೆ ಊಟ, ಬಟ್ಟೆ, ವಿದ್ಯೆ ಕೊಡದ ಸ್ಥಿತಿಯಲ್ಲಿ ನಾವಿದ್ದೇವೆ ಅಂದ್ರೆ ಇದಕ್ಕಿಂತ ನಾಚಿಕೆ ವಿಷಯ ಬೇಕಾ?

ಯಾಕೆ ಈ ದಿನಾಚರಣೆಯ ನಾಟಕ?

ನಿಮ್ಮ ಫೋಟೊಗಳು ಮನ ಕಲಕಿತು...

ಶಶೀ ಬೆಳ್ಳಾಯರು said...

ಸೀಟಿಗಾಗಿ ಕೋಟಿ ಹಂಚುವ ರಾಜಕಾರಣಿಗಳು... ಸಿನಿಮಾ, ಕಿರುತೆರೆಗಾಗಿ ಗೋಣಿ ತುಂಬಾ ದುಡ್ಡು ಸುರಿಯುವ ಕಾಸಿನ ಹುಚ್ಚರ ನಡುವೆ ದಟ್ಟ ದಾರಿದ್ರ್ಯದ ಮಕ್ಕಳ ಚಿತ್ರಣ ದೇಶದ ಮಹಾನಗರಗಳಲ್ಲಿ ಇಂದಿಗೂ ಹಾಗೇ ಇದೆ. ಧನ್ಯವಾದ ಗೆಳೆಯರೇ,,,, ನನಗೂ ಇಂತಹವರ ಬದುಕು ಕಂಡು ರಾಜಕಾರಣಿಗಳ ಸೋಗಲಾಡಿತನಕ್ಕೆ ಧಿಕ್ಕಾರ ಕೂಗೋಣವೆನಿಸುತ್ತದೆ....

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಶಶಿಯವರೆ, ನಿಮ್ಮ ಫೋಟೊ ಗಳು ಮತ್ತು ಲೇಖನ ಓದಿದಾಗ ಅವ್ಯಕ್ತ ನೋವೊ೦ದು ಕಾಡಿತು.ಆಚ್ರಣೆಗೆ ಸೀಮಿತಗೊಳಿಸುವ ಅಧಿಕಾರ ದಾಹಿಗಳು ಸೋಗಲಾಡಿತನ ತೋರುವ,ಪ್ರಚಾರಪ್ರಿಯರು,ಇದನ್ನೆಲ್ಲ ನೋಡಿದಾಗ ನಾವು ನಿಜವಾಗಿ ಬೌಗೋಳಿಕ ಸ್ವಾತ೦ತ್ರ್ಯವಷ್ಟ್ಟೇ ಪಡೆದದ್ದು ಎ೦ದೆನಿಸುತ್ತದೆ.ಯಾಕೊ ನಿಮ್ಮ ಲೇಖನ ಓದಿದ ಮೇಲೆ ಮಾತು ಮೌನವಾಗುತ್ತಿದೆ.ಮನಸ್ಸು ಖಾಲಿ..,ಖಾಲಿ.

ಶಶೀ ಬೆಳ್ಳಾಯರು said...

ಧನ್ಯವಾದ ಮುಳಿಯಾಲ ಅವರೇ... ನಾವಿರುವುದೇ ಭ್ರಮಾಧೀನ ಬದುಕಿನಲ್ಲಿ. ಹೊರಗೆ ಕಾಲಿಟ್ಟರೆ ಎಲ್ಲವೂ ಅಂದ-ಚಂದ ಕಣ್ಣಿಗೆ ಮಾತ್ರ. ಆದರೆ ವಾಸ್ತವವನ್ನು ಅರಿಯುವ ಪ್ರಯತ್ನ ಮಾಡಿದಾಗ ಮನಸ್ಸು ಭಾರವಾಗುತ್ತದೆ. ಇಂತಹ ನೀಚ ಜಗತ್ತಿನಲ್ಲಿ ನಾವು ಬದುಕಬೇಕೇ ಎಂಬ ಬೇಸರವೂ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಆದರೇನು ಮಾಡುವುದು? ಬದುಕಲೇಬೇಕು.. ಅಧಿಕಾರಶಾಹಿಗಳ ದಬ್ಬಾಳಿಕೆ, ನೊಂದವರ ಕಣ್ಣೀರ ನಡುವೆ ಕುರುಡರಂತೆ... ಧನ್ಯವಾದಗಳು ನಿಮಗೆ... ನಿಮ್ಮ ಪ್ರೋತ್ಸಾಹ ನಮ್ಮ ಬರವಣಿಗೆಯ ಜೊತೆಗಿರಲಿ.

ಸುಷ್ಮಾ ಮೂಡುಬಿದಿರೆ said...

ಹಾಯ್ ಶಶೀ...
ಮೊನ್ನೆಯ ದಿನ ಪಕ್ಕದ ಮನೆಯ ಪುಟ್ಟ, ಈ ವಿಷಯವಾಗಿ ಭಾಷಣ ಬರೆದು ಕೊಡು ಅಂದಾಗ..ನನ್ನಲ್ಲೂ ತೀವ್ರವಾಗಿ ಕಾಡಿದ ಪ್ರಶ್ನೆ ಇದೆ ಶಶೀ..ಮಕ್ಕಳ ದಿನಾಚರಣೆ ಎಷ್ಟು ಅರ್ಥ ಪೂರ್ಣ ಎನ್ನುವುದು..? ಪುಟ್ಟ ಕಂದಮ್ಮಗಳ ಕಣ್ಣೀರು ಒರೆಸಲಾಗದ ಅಸಾಹಯಕತೆಯದರೂ ನಮಗೆ ಎಂತದ್ದು!? ನಾವು ನಾವು ಬದಲಾಗಬೇಕು, ದೋರಣೆಗಳು ಬದಲಾಗಬೇಕು, ಅಧಿಕಾರಶಾಹಿ ಮನೋಭಾವನೆ ದೂರಗಬೇಕು..ವಿವೇಚನೆ ಹೊಂದಿರುವ ಮತ್ತು ವಿಮೋಚನೆ ಗಳ ಬಯಸುವ ಮನಸ್ಸುಗಳ ನಡುವೆ ಆಚರಣೆ ಅರ್ಥ ಪಡೆಯಬೇಕು.. ಬದಲಾವಣೆಯ ತಂಗಾಳಿಯ ನಡುವೆ ಎಳೆ ಮನಸ್ಸುಗಳ ಕನಸು ಅರಳಬೇಕು...

ಶಶೀ ಬೆಳ್ಳಾಯರು said...

ಧನ್ಯವಾದ ಸುಷ್ಮಾ... ನಿಜಕ್ಕೂ ಇದನ್ನು ಪೆನ್ನಿನಿಂದ ಪರಿವರ್ತನೆ ಮಾಡ್ಬಹುದು ಅನ್ನೋದು ನಮ್ಮ ಭ್ರಮೆ ಮಾತ್ರ. ಈ ಬಗ್ಗೆ ಜನರೇ ಜಾಗೃತರಾಗಬೇಕು ಅಲ್ವಾ?

ಕಡಲಾಚೆಯ ಕಲರವ said...

ಶಶಿಯವರೇ...
ಸಮಯೋಚಿತ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು..
ಇದು ನಿಜವಾಗಿಯೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಭಾಷಣ ಬಿಗಿಯುವ ನಾವು,ಅವರ ಭವಿಷ್ಯ ರೂಪಿಸುವಲ್ಲಿ ಎಷ್ಟು ಸಫಲರಾಗಿದ್ದೇವೆ..? ಇದಕ್ಕೆ ಯಾರು ಹೊಣೆ?ಹೆತ್ತವರೋ..ಸರಕಾರವೋ..?
ಒಟ್ಟಿನಲ್ಲಿ ಏನೂ ಅರಿಯದ ಮುಗ್ಧ ಮಕ್ಕಳ ಭವಿಷ್ಯ ಬೀದಿ ಪಾಲು!!

ಸಾಗರದಾಚೆಯ ಇಂಚರ said...

tumbaa mana muttuva baraha sir

tumbaa chintange hacchide

ಶಶೀ ಬೆಳ್ಳಾಯರು said...

thanx guru...nimma preethi heege irali. dhanyavadagalu