doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, May 18, 2010

ಎ ಮೇರೆ ವತನ್ ಕೆ ಲೋಗೋ...


ಏ ಮೇರೆ ವತನ್ ಕೆ ಲೋಗೋ
ಝರಾ ಆಂಖ್ ಮೆ ಭರ್ಲೋ ಪಾನಿ
ಜೊ ಶಹೀದ್ ಹುಯೇ ಹೈ ಉನ್ಕಿ
ಝರಾ ಯಾದ್ ಕರೋ ಕುಬರ್ಾನಿ
`ದೇಶ ಸೇವೆಯೇ ಈಶ ಸೇವೆ' ಅಂತ ನಂಬಿರೋ ನಮ್ಮ ಗಡಿ ಕಾಯುವ ಹುತಾತ್ಮ ಸೈನಿಕರನ್ನು ಸ್ಮರಿಸುವ ಈ ಹಾಡು ಅದೆಷ್ಟು ಅರ್ಥಪೂರ್ಣ ಅಲ್ವಾ? ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ನೋ ಹಾಗಾಗುತ್ತೆ. ದೇಶಸೇವೆಯ ಪವಿತ್ರ ಕೈಂಕರ್ಯಕ್ಕೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಅದೆಷ್ಟೋ ವೀರಯೋಧರು ನಮ್ಮ ಕಣ್ಣಮುಂದೆ ಮಿಂಚಿ ಮರೆಯಾಗ್ತಾರೆ.
ನಾವು ದಿನನಿತ್ಯದ ಜಂಜಾಟದ ಬದುಕಿನಲಿ ಎಷ್ಟು ಪುರುಸೋತ್ತು ಇಲ್ಲಾಂದ್ರೂ ಊಟ, ತಿಂಡಿ, ನಿದ್ದೆ ಇವನ್ನೆಲ್ಲಾ ಸಮಯಕ್ಕೆ ಸರಿಯಾಗಿ ಮಾಡ್ತೀವಿ. ಆದ್ರೆ ಒಂದರೆಗಳಿಗೆ ನಮ್ಮ ದೇಶದ ಉದ್ದಗಲಕ್ಕೂ ಗಡಿಯಲ್ಲಿ ತನ್ನ ಹೆತ್ತವರು, ಬಂಧು ಬಳಗ, ಸ್ನೇಹಿತರು ಇವರ ನೆನಪಿನಿಂದ ದೂರ ನಿಂತು ದೇಶ ರಕ್ಷಣೆಗಾಗಿ ತನ್ನನ್ನೇ ಮುಡಿಪಾಗಿಟ್ಟ ಆ `ಸೈನಿಕ'ನನ್ನು ನೆನಪಿಸಿಕೊಳ್ಳಿ ನೋಡೋಣ. ಸಾಧ್ಯವೇ ಇಲ್ಲ... ಯಾಕೇಂದ್ರೆ, ಗಡಿಯಲ್ಲಿ ಸೈನಿಕ ಕಾವಲು ಕಾಯೋದನ್ನು ನಾವು ಕಲ್ಪಿಸಿಕೊಳ್ಳಬಹುದೇನೋ, ಆದ್ರೆ ಅವನು ಅಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ಅಂತಾ ಊಹಿಸೋಕ್ಕೂ ನಮ್ಮಿಂದಾಗಲ್ಲ. ನಾವು ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಮಲಗ್ತೀವಿ, ನಮಗೆ ನಮ್ಮ ಮನೆಯೊಳಗಿರೋ ಚಿನ್ನ, ಹಣ, ಒಡವೆ, ವಸ್ತುಗಳು ಎಲ್ಲಿ ಕಳ್ಳರ ಪಾಲಾಗುತ್ತೋ ಅಂತ ಭಯ. ಮನೆ ಮುಂದೆ `ನಾಯಿ ಇದೆ ಎಚ್ಚರಿಕೆ' ಅಂತಾ ದೊಡ್ಡದಾಗಿ ಬೋಡರ್್ ಹಾಕಿರ್ತೀವಿ, ಕಂಪೌಂಡ್ಗೆ ಉದ್ದ ಕೂದಲಿನ ನಾಯಿಯನ್ನು ದೊಡ್ಡ ಸಂಕಲೆಯಲ್ಲಿ ಕಟ್ಟಿರ್ತೀವಿ, ಕಳ್ಳರು ಅಂಗಳಕ್ಕೆ ಬಂದ್ರೆ ತಿಳೀಲಿ ಅಂತ ಅಲಾರಾಂ ವ್ಯವಸ್ಥೆಯನ್ನೂ ಮಾಡಿರ್ತೀವಿ. ಇದೆಲ್ಲಾ ಇದ್ರೂ ನಮ್ಗೆ ಮನೆಯೊಳಗೆ ಕಳ್ಳರು ನುಗ್ಗಿದ್ರೆ ಅಂತ ಭಯ. ಇವೆಲ್ಲಾ ಯಾಕೆ ಇಲ್ಲಿ ಪ್ರಸ್ತಾಪಿಸಿದೆ ಅಂದ್ರೆ ದೇಶವನ್ನು ಶತ್ರುಗಳಿಂದ ಕಾಯೋದು ಅಂದ್ರೆ ನಮ್ಮ ಮನೆಯನ್ನು ಕಾಯುವ ಹಾಗಲ್ಲ ಅಂತ ಹೇಳೋಕೆ. ಅಲ್ಲಿ ಗಡಿಯಲ್ಲಿ ನಿಂತ ಸೈನಿಕ ಕಿಂಚಿತ್ತು ಏಮಾರಿದ್ರೂ ನಮ್ಮ ಮನೆಯನ್ನು ಕಾಯೋ ನಾಯಿ, ಆ ಬೋಡರ್್, ಅಲಾರಾಂ ಇವೆಲ್ಲಾ ವ್ಯರ್ಥ ಅನ್ನೋದು ನಮ್ಗೆ ಮರೆತೇ ಹೋಗಿರುತ್ತೆ.
ಗಡಿ ಕಾಯುವ ಸೈನಿಕ ಎಂದೂ ತನ್ನ ಭವಿಷ್ಯದ ಬಗ್ಗೆ ಚಿಂತಿಸೋದಿಲ್ಲ. ಬದಲಾಗಿ ತನ್ನ ದೇಶ, ತನ್ನ ಜನರು ಅನ್ನೋ ಅಭಿಮಾನದಿಂದ ರಾತ್ರಿ ಹಗಲು ದುಡಿಯ್ತಾನೆ. ನಮ್ಮೂರಿನಲ್ಲಿ ಎರಡು ದಿನ ಶೀತಗಾಳಿ ಬೀಸಿದರೆ, ಚಳಿ ಹೆಚ್ಚಾದರೆ ನಮ್ಗೆ ಶೀತ, ಕೆಮ್ಮು, ಜ್ವರ ಎಲ್ಲಾ ಶುರುವಾಗುತ್ತೆ. ಚಳಿಯ ನಡುಕದಲ್ಲಿ ನಿದ್ದೆ ಹಾರಿ ಹೋಗಿರುತ್ತೆ. ಅದಕ್ಕಾಗಿ ಕಂಬಳಿ ಹೊದ್ದರೂ ನಮಗೆ ನೆಮ್ಮದಿಯಿಲ್ಲ. ಮರುದಿನ ಎದ್ದವರೇ ರಾತ್ರಿಯೆಲ್ಲಾ ಚಳಿಯಿಂದಾಗಿ ನಿದ್ದೇನೇ ಇಲ್ಲ ಅಂತ ತಿರುಗಾ ಮಲಗ್ತೀವಿ. ಗಡಿಯ ಆ ಕೊರೆವ ಚಳಿಯಲ್ಲಿ ಶತ್ರುಗಳಿಂದ ನಮ್ಮನ್ನು ಕಾಪಾಡಲು, ನಡುಗುವ ಕೈಗಳಲ್ಲಿ ಬಂದೂಕು ಹಿಡಿದು ಕಾಯ್ತಾನಲ್ವಾ, ಅವನು ನಿದ್ದೆ ಬಂತು ಅಂತ ಮಲಗಿಬಿಟ್ರೆ, ನಾವು ಶಾಶ್ವತವಾಗಿ ಮಲಗಿಬಿಡಬೇಕಾಗುತ್ತೆ. ಸೈನಿಕ ಅಂದ ಕೂಡಲೇ ಅವನ ಜತೆ ಮಾತಾಡ್ಬೇಕು, ಅವನ ಅನುಭವವನ್ನು ಕೇಳಿ ತಿಳಿಯಬೇಕು ಅಂತ ಮನಸ್ಸು ಹಂಬಲಿಸೋದು ಬಹುಷ: ಆ ಸೈನಿಕನ ಮೇಲಿನ ಗೌರವದಿಂದಲೇ ಇರಬೇಕು.
ನಮ್ಮ ದೇಶವನ್ನು ಆಳುತ್ತಿರುವ ಕುಟಿಲ ರಾಜತಾಂತ್ರಿಕ ವ್ಯವಸ್ಥೆಯಿಂದಾಗಿ ಮೂರಕ್ಷರ ಕಲಿತವರು ಜನನಾಯಕರಾಗಿ ಮೆರೆಯುತ್ತಿದ್ದಾರೆ. ರೌಡಿಗಳು ಎಂ. ಎಲ್ .ಎ. ಗಳಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದಿನನಿತ್ಯ ಲೆಕ್ಕವಿಲ್ಲದಷ್ಟು ಮಂದಿ ಉಗ್ರಗಾಮಿಗಳು ನಮ್ಮ ದೇಶಕ್ಕೆ ಸಡ್ಡು ಹೊಡೆಯಲು ಗಡಿ ರೇಖೆಯುದ್ದಕ್ಕೂ ನುಸುಳಿ ಒಳಬರುತ್ತಿದ್ದಾರೆ. ನಮ್ಮ ಪವಿತ್ರ ಭಾರತ ಭೂಮಿಯಲ್ಲಿ ವಿದ್ವಂಸಕ ಕೃತ್ಯ ನಡೆಸಿ, ನಮ್ಮ ಆಥರ್ಿಕ ಸ್ಥಿರತೆಯನ್ನು ಬುಡಮೇಲು ಮಾಡಲು ಶತ್ರು ರಾಷ್ಟ್ರಗಳು ಪಣತೊಟ್ಟು ನಿಂತಿವೆ. ಇವರೆಲ್ಲರಿಂದ ನಮ್ಮ ದೇಶವನ್ನು ಕಾಯೋದಂದ್ರೆ ಅದು ಸುಲಭದ ಮಾತಲ್ಲ, ಅನನ್ಯ ದೇಶಪ್ರೇಮವನ್ನು ಮೈಗೂಡಿಸಿಕೊಂಡವನಿಂದ ಮಾತ್ರವೇ ಇದು ಸಾಧ್ಯ. ಏನೇ ಇರಲಿ... ನಮ್ಮನ್ನು ಹೆತ್ತ ನಮ್ಮವ್ವನಂತೆಯೇ ನಮ್ಮನ್ನು ಪೊರೆಯುವ ಭಾರತ ಮಾತೆಯೂ ಮಿಗಿಲಲ್ಲವೇ? ತಾಯಿ ಜನ್ಮ ನೀಡುತ್ತಾಳಾದಾರೆ ಭೂಮಿ ತಾಯಿ ನಮಗೆ ಬದುಕಿನ ಎಲ್ಲಾ ಪಾಠವನ್ನು ಕಲಿಸಿಕೊಡುತ್ತಾಳೆ. ನಮ್ಮ ತಾಯಿಯನ್ನು ನಾವು ಯಾವ ರೀತಿ ರಕ್ಷಣೆ ಮಾಡುತ್ತೇವೋ, ಅದಕ್ಕಿಂತ ಹೆಚ್ಚಾಗಿ ಭೂಮಿತಾಯಿಯನ್ನು ಶತ್ರುಗಳಿಂದ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ ತಾನೇ?
ದೇಶಸೇವೆಗೆ ಅವನು, ಇವನು ಎನ್ನುವ ಬೇಧಭಾವವಿಲ್ಲ. ದೇಶಕ್ಕೆ ಗಡಿಯಿದೆಯೇ ಹೊರತು ದೇಶಪ್ರೇಮಕ್ಕೆ ಗಡಿಯಿಲ್ಲ. ಯುವಜನತೆ ದೇಶಾಬಿಮಾನದ ಕಿಚ್ಚನ್ನು ಬೆಳೆಸಿಕೊಳ್ಳಬೇಕು. ದೇಶಸೇವೆಗಾಗಿ ಪ್ರಾಣತ್ಯಾಗ ಮಾಡಿದ ಅಜಾದ್, ಭಗತ್ಸಿಂಗ್, ರಾಜ್ಗುರು, ಇವರು ನಮ್ಮ ರೋಲ್ ಮಾಡೆಲ್ ಆಗ್ಬೇಕು. ಪ್ರತಿಯೊಂದು ಮಗುವಿನಲ್ಲೂ ದೇಶಪ್ರೇಮವನ್ನು ಬಡಿದೆಬ್ಬಿಸುವ ಹಿರಿಯರ ಕತೆಗಳ ಮೂಲಕ ಪ್ರೇರಣೆಯನ್ನು ನೀಡ್ಬೇಕು. ಇದೆಲ್ಲಾ ಪ್ರತಿ ಹೆತ್ತವರ ಕರ್ತವ್ಯವಾದಾಗ ಮಡಿಕೇರಿಯ ಹಾಗೆ ನಮ್ಮಲ್ಲೂ ಪ್ರತಿ ಮನೆಗೊಬ್ಬ ಯೋಧ ಜನ್ಮ ತಳೆಯುತ್ತಾನೆ. ಆಗ ಗಡಿ ಕಾಯುವ ಸೈನಿಕನ ಕೆಲಸವೂ ಹಗುರವಾಗುತ್ತದೆ. ಆ ಹೊತ್ತು ನಮ್ಮ ದೇಶದ ಮೇಲೆ ಕಣ್ಣಿಡಲು ಯಾರೂ ಧೈರ್ಯ ತೋರುವುದಿಲ್ಲ.
ದೇಶಸೇವೆಯಲ್ಲಿ ಹುತಾತ್ಮರಾದವರನ್ನು ಸ್ಮರಿಸಲು ಆ ದಿನ, ಈ ದಿನದ ಅಗತ್ಯವಿಲ್ಲ. ಎಲ್ಲೇ ಇರಲಿ, ಹೇಗೇ ಇರಲಿ ಕ್ಷಣಕಾಲ ಸ್ಮರಣೆಗೆ ಬಂದು ಕಣ್ಣಂಚು ತೇವಗೊಂಡರೆ ಅಷ್ಟೇ ಸಾಕು. ಗಡಿ ಕಾಯುವ ಯೋಧನಿಗೆ ಗೌರವದಿ ಸೆಲ್ಯೂಟ್ ಹೊಡೆದರಷ್ಟೇ ಸಾಲದು, ಆತನ ಸಂಕಷ್ಟವನ್ನು ಅಥರ್ೈಸಿ ಆತನಿಗಾಗಿ ಅನುದಿನ ಹಾರೈಸುವ ಮನಸ್ಸಿರಬೇಕು.
ಜೈ ಹಿಂದ್..!

No comments: